-ಸಂದೇಶ್ ಎಸ್.ಜೈನ್, ದಾಂಡೇಲಿ
ದಾಂಡೇಲಿ : ಹಳಿಯಾಳ – ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ನಾಲ್ಕು 108 ಆಂಬುಲೆನ್ಸ್ಗಳಿದ್ದರೂ ಸಕಾಲದಲ್ಲಿ ಹಾಗೂ ಸಂಕಷ್ಟದ ಸಮಯದಲ್ಲಿ ಸಿಗದೇ ಇರುವುದರಿಂದ ರೋಗಿಗಳಿಗೆ ತೀವ್ರ ತೊಂದರೆಯಾಗಿದೆ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಧಾರವಾಡ – ಹುಬ್ಬಳ್ಳಿಗೆ ಕರೆದೊಯ್ಯಲು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಹಳ ಮುಖ್ಯವಾಗಿ ಬಡ ಜನರಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಈ ಕೂಡಲೇ 108 ಆಂಬುಲೆನ್ಸ್ ಸೇವೆಯ ಸಮಸ್ಯೆಯನ್ನು ಬಗೆಹರಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಬಹಳಷ್ಟು ಸಲ 108 ಆಂಬುಲೆನ್ಸ್ ಹಲವಾರು ಕಾರಣಗಳಿಂದಾಗಿ ಸೇವೆಗೆ ಲಭ್ಯವಾಗುತ್ತಿಲ್ಲ. ಇದರಿಂದ ರೋಗಿಗಳಿಗೆ ತುರ್ತು ಆರೋಗ್ಯ ಸೇವೆ ನೀಡಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಗರಕ್ಕೆ ನೀಡಲಾದ 108 ಆಂಬುಲೆನ್ಸ್ ನಲ್ಲಿ ಒಂದು ಶಿಪ್ಟ್ ನಲ್ಲಿ ಮಾತ್ರ ನರ್ಸ್ ಸಿಬ್ಬಂದಿಯಿರುತ್ತಾರೆ. ಒಟ್ಟಿನಲ್ಲಿ ಕಳೆದ ಒಂದು ವರ್ಷದಿಂದ 108 ಆಂಬುಲೆನ್ಸ್ ಸೇವೆಯಲ್ಲಿ ಸಮಸ್ಯೆ ಉಂಟಾಗಿದ್ದು, ಈ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮಾಜಿ ನಗರ ಸಭಾ ಸದಸ್ಯ ಮಸ್ತಾನಸಾಬ್ ಅತ್ತಾರ ಮತ್ತು ಸ್ಥಳೀಯರಾದ ವಿಠ್ಠಲ ಧರೇಕರ ಅವರು ಶುಕ್ರವಾರ ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.